"ಸ್ವಪ್ನ ಸಾರಸ್ವತ" ನಾಲ್ಕುನೂರು ವರುಷಗಳ ಹಿಂದೆ ಗೋವಾದಲ್ಲಿ ವಾಸವಾಗಿದ್ದ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಏಳು ಬೀಳಿನ ಕಥೆ. ಪೋರ್ಚುಗೀಸರ ದಬ್ಬಾಳಿಕೆಗೆ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯವು ಗೋವೆಯ ತಮ್ಮ ನೆಲ ತೊರೆದು ಅಪರಿಚಿತ ನೆಲಕ್ಕೆ ವಲಸೆ ಹೋಗುವ ದಾರುಣ ಕಥಾನಕ ಇದು. ಭಾರತಕ್ಕೆ ಪೋರ್ಚುಗೀಸರ ಆಗಮನ, ವ್ಯಾಪಾರಕ್ಕೆಂದು ಬಂದವರು ಗೋವೆಯನ್ನು ಗೆದ್ದು ವಸಾಹತನ್ನಾಗಿಸಿಕೊಳ್ಳುವ ಘಟನೆ ನಂತರ ನಡೆಯುವ ಬಲವಂತದಿಂದ ಹಾಗೂ ಆಮಿಷಗಳನೊಡ್ಡಿ ನಡೆಯುವ ಮತಾಂತರಗಳು, ದೇವಸ್ಥಾನಗಳ ಧ್ವಂಸ ಇತ್ಯಾದಿ ಸ್ಥಳೀಯ ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬಗಳ ಭಾವನೆ ಹಾಗೂ ನಂಬಿಕೆಗಳಿಗೆ ತೀವ್ರವಾದ ಧಕ್ಕೆ ಉಂಟು ಮಾಡುತ್ತವೆ. ಇಂಥಹ ಪರಿಸ್ಥಿತಿಯಲ್ಲಿ ನಂಬುಗೆ, ಧರ್ಮ ಹಾಗೂ ಜೀವಗಳನ್ನು ಉಳಿಸಿಕೊಳ್ಳುವ ಸಲುವಾಗಿ ಗೋವೆಯ ವೆರಣೆ ಎಂಬ ಗ್ರಾಮದ ನಿವಾಸಿ ನರಸಪ್ಪಯ್ಯನವರ ಮೊಮ್ಮಗ ವಿಠ್ಠು ಪೈ ನಾಗ್ಡೋ ಬೇತಾಳನ ಆಜ್ಞೆಯ ಮೇರೆಗೆ ೫-೬ ಕುಟುಂಬಗಳೊಂದಿಗೆ ರಾತ್ರೋ ರಾತ್ರಿ ಸಂಸಾರ ಸಮೇತ ತನ್ನೂರನ್ನು ಖಾಲಿ ಮಾಡುತ್ತಾನೆ.ಹೀಗೆ ಹೊರಡುವಾಗ ಹಣ, ಒಡವೆ, ವಸ್ತ್ರ ಎಲ್ಲವನ್ನೂ ಬಿಟ್ಟು ಹೋಗುತ್ತೇವೆಂಬ ನೋವಿಗಿಂತ ಆ ಸ್ಥಳದಲ್ಲಿ ಕಳೆದ ತಮ್ಮ ಭಾವನಾತ್ಮಕ ನೆನಪುಗಳನ್ನು ಬಿಟ್ಟು ಹೋಗುತ್ತಿದ್ದೇವೆ ಎಂಬುದು ಅವರನ್ನು ಕಾಡುತ್ತದೆ. ಅಷ್ಟೇ ಅಲ್ಲ; ಈ ಪೋರ್ಚುಗೀಸರು ತಮ್ಮ ಮೂಲ ನೆಲಕ್ಕಂಟಿರುವ ಭಾವಗಳ ಬೇರನ್ನೇ ಕೀಳುತ್ತಿದ್ದಾರೆ ಎಂಬಷ್ಟು ನೋವು ಅವರನ್ನು ಆಕ್ರೋಶಕ್ಕೆ ದೂಡುತ್ತದೆ. ಪೋರ್ಚುಗೀಸರ ರಾಜ್ಯದಿಂದ ಆದಷ್ಟು ದೂರ ಹೋಗಬೇಕೆಂದು ಕೊಚ್ಚಿಗೆ ಹೊರಟು ಮಧ್ಯೆ ನಾನಾ ಕಾರಣಗಳಿಂದ ಒಂದೊಂದು ಕುಟುಂಬ ಒಂದೊಂದು ಊರಿನಲ್ಲಿ ನಿಲ್ಲುತ್ತಾರೆ. ವಿಠ್ಠು ಪೈನ ಕುಟುಂಬವು ದಕ್ಷಿಣದ ಕುಂಬಳೆಯ ಬಳಿಯಿರುವ ಬಳ್ಳಂಬೀಡಿನಲ್ಲಿ ನೆಲೆಯೂರುತ್ತದೆ. ಹೊಸದಾಗಿ ವ್ಯಾಪಾರ ಶುರುಮಾಡಿ ತಮ್ಮ ನೆಲೆಯನ್ನು ಗಟ್ಟಿಯಾಗಿಸಿಕೊಳ್ಳುತ್ತಾ ಹೋಗುತ್ತಾರೆ. ಮುಂದೆ ಈ ಕುಟುಂಬ ಬೆಳೆಯುತ್ತಾ ಮತ್ತು ಅಳಿಯುತ್ತಾ ಸಾಗುತ್ತದೆ. ಬದಲಾಗುವ ಕಾಲದೊಂದಿಗೆ ಹೇಗೆ ಹೊಂದಿಕೊಳ್ಳಬೇಕು ಎಂಬುದನ್ನು ಇತಿಹಾಸದಲ್ಲಿ ಹಲವು ವಲಸೆ ಹಾಗೂ ಸ್ಥಳಾಂತರಗಳನ್ನು ಕಂಡಿರುವ ಸಾರಸ್ವತ ಬ್ರಾಹ್ಮಣ ಸಮುದಾಯದ ಮೂಲಕ ಬದಲಾವಣೆಯ ಬಿರುಗಾಳಿ ಎದುರಿಸುವ ಯಾರಿಗಾದರೂ ಒಂದು ರೀತಿಯ ಸಂದೇಶ ರವಾನಿಸುವ ಆಶಯ ಈ ಕಾದಂಬರಿಯದ್ದಾಗಿದೆ.
There are no comments on this title.