ಇದು ಪ್ರವಾದಿ ಮುಹಮ್ಮದರ ಜೀವನ ಘಟನಾವಳಿಗಳನ್ನು ಕುರಿತು ಇರುವ ಕಾದಂಬರಿ. ಲೇಖಕರು ತಮ್ಮ ಪ್ರಸ್ತಾವನೆಯಲ್ಲಿ ಹೇಳುವಂತೆ ಕಥೆಯ ಚೌಕಟ್ಟು ಮತ್ತು ಪುಸ್ತಕದ ಗಾತ್ರಕ್ಕೆ ಅನುಗುಣವಾಗಿ ತೀರಾ ಪ್ರಮುಖ ಎನ್ನುವ ಅಂಶಗಳನ್ನು ಕ್ರೋಢೀಕರಿಸಿ ಕಥೆಯನ್ನು ಹೆಣೆಯಲಾಗಿದೆ. ಮೂರು ವಿಭಾಗಳಾಗಿ ವಿಂಗಡಿಸಿರುವ ಕಾದಂಬರಿಯಲ್ಲಿ ಪ್ರವಾದಿಯವರ ಹುಟ್ಟು, ಹೆತ್ತವರು ಮತ್ತು ಬಾಲ್ಯದ ದಿನಗಳು ಒಂದು ಭಾಗವಾದರೆ, ಎರಡನೇ ಭಾಗದಲ್ಲಿ ಅವರಿಗೆ ಉಂಟಾದ ಅಡಚಣೆಗಳು,ಎದುರಿಸಿದ ಯುದ್ಧಗಳು ಮೆಕ್ಕಾದಿಂದ ಯಸ್ರಿಬ್ ನಗರಕ್ಕೆ ವಲಸೆ ಹೋಗುವುದರ ವಿವರಗಳು ಸೇರಿಕೊಂಡಿವೆ. ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಮತ್ತೆ ಮೆಕ್ಕಾ ಪ್ರವೇಶಿಸುವುದು ಕೊನೆಯ ಭಾಗದಲ್ಲಿ ಬರುತ್ತದೆ. ಬೊಳುವಾರು ಅವರ ಬರಹದ ಶೈಲಿ ಇಷ್ಟವಾದರೂ ಕಾದಂಬರಿಯಲ್ಲಿ ಬರುವ ಅನೇಕ ಪಾತ್ರಗಳು ಮತ್ತು ಸಂದರ್ಭಗಳ ಕುರಿತು ಅನೇಕ ಪ್ರಶ್ನೆಗಳಿಗೆ ಉತ್ತರ ಹುಡುಕಲು ಕಷ್ಟವಾಗುತ್ತದೆ. ಕೆಲವೊಂದು ವಿಚಾರಗಳನ್ನು ಒಪ್ಪಿಕೊಳ್ಳಲು ಪ್ರಯಾಸವಾಗುತ್ತದೆ. ನನಗಿರುವ ಅಲ್ಪ ಮಾಹಿತಿಯಿಂದಲೋ ಅಥವಾ ತೀರಾ ಸಂಕ್ಷಿಪ್ತವಾಗಿರುವ ಕಾರಣದಿಂದಲೋ ಅಥವಾ ಲೇಖಕರು ಪ್ರತಿಕೂಲ ಅಂಶಗಳನ್ನು ಕೈ ಬಿಟ್ಟಿದ್ದರಿಂದಲೋ ಈ ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿವೆ.
Kannada Fiction: ಕನ್ನಡ ಕಾದಂಬರಿ Kannada Literature: ಕನ್ನಡ ಸಾಹಿತ್ಯ