ಮಾರ್ಗಾನ್ವೇಷಣೆ' ಕೃತಿಯು ತುಮಕೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕ ನಿತ್ಯಾನಂದ ಬಿ ಶೆಟ್ಟಿ ಅವರ ಸಾಹಿತ್ಯ ಸಂಶೋಧನೆ ರೀತಿ- ನೀತಿಯ ಬಗೆಗೆ ಬರೆದಿರುವ ಸಂಶೋಧನಾ ಕೃತಿಯಾಗಿದೆ. ಈ ಕೃತಿಯು ಒಂಭತ್ತು ಅನುಕ್ರಮಗಳಾದ ಅರಿಕೆ-ನೆನವರಿಕೆ, ಭೂಮಿಕೆ, ಪ್ರವೇಶ, ಸಂಶೋಧನೆ: ಹೆಜ್ಜೆ ಜಾಡು, ಸಂಶೋಧನೆ: ವಿಧಾನ- ವಿಧಾನಕ್ರಮ, ಕನ್ನಡ ಸಂಶೋಧನೆ: ಆರಂಭದ ದಾರಿಗಳು, ಕನ್ನಡ ಸಾಹಿತ್ಯ ಸಂಶೋಧನೆ: ವಿಭಿನ್ನ ನೆಲೆಗಳು, ಸಾಹಿತ್ಯ ಸಂಶೋಧನೆ- ಸಂಶೋಧನ ಸಂಸ್ಕೃತಿ, ಅನುಬಂಧ ಮತ್ತು ಪರಾಮರ್ಶನ ಗ್ರಂಥಗಳ ವಿವರಗಳನ್ನು ಒಳಗೊಂಡಿದೆ. ಲೇಖಕ ಎನ್. ಎಸ್. ಗುಂಡೂರ ಅವರು ಕೃತಿಗೆ ಮುನ್ನುಡಿ ಬರೆದು ‘ಹೊಸ ರೀತಿಯ ಚಿಂತನೆಯ ಕಾಳಜಿಯೊಂದನ್ನು ಪ್ರಾರಂಭ ಮಾಡಿದೆ. ಬೀಜಗುಣವುಳ್ಳ ಇಂತಹ ಪಠ್ಯಗಳನ್ನು ಮತ್ತೆ ಮತ್ತೆ ಓದಬೇಕಾಗುತ್ತದೆ. ಓದಿದಷ್ಟು ನಿಧಾನವಾಗಿ, ಅರಿವು ತೆರೆದುಕೊಳ್ಳುತ್ತದೆ. ಈ ಪುಸ್ತಕಕ್ಕೆ ಬೀಜದ ಗುಣ ಬಂದಿರುವುದು ಲೇಖಕರ ಮನೋಭಾವ ಮತ್ತು ಅವರು ಆಯ್ದುಕೊಂಡ ಸಂಭಾಷಣೆಯ ರಚನೆಯಿಂದ. ಇದು ಪ್ರಕಟಣೆಗೆಂದು ಬರೆದುಕೊಂಡ ಪುಸ್ತಕವಲ್ಲ. ಲೇಖಕರಿಗೆ ಕಾಡಿದ ಕೆಲವು ಪ್ರಶ್ನೆ, ಹೊಳೆದ ಒಳನೋಟಗಳನ್ನು ಹಂಚಿಕೊಳ್ಳಬೇಕು, ತಾವು ಏನನ್ನೋ ಮುಖ್ಯವಾಗಿ ಹೇಳಿಕೊಳ್ಳಬೇಕೆಂಬ ಉತ್ಕಟ ಬಯಕೆಯಿಂದ ಮೂಡಿಬಂದ ಪುಸ್ತಕ. ಇಂತಹ ಮನೋಭಾವದಿಂದಲೇ ಸಂಶೋಧನಾಸಕ್ತ ಹಾಗೂ ಮಾರ್ಗದರ್ಶಕರ ನಡುವೆ ನಡೆಯುವ ಸಂಭಾಷಣೆಯು ನಮಗೆ ಸಂಶೋಧನೆಯ ಕ್ರಮವನ್ನು ಕಲಿಸುತ್ತದೆ. ಮೊಟ್ಟ ಮೊದಲ ಬಾರಿಗೆ, ಆಧುನಿಕ ಕನ್ನಡ ಅಧ್ಯಯನದಲ್ಲಿ ಶೈಕ್ಷಣಿಕ ಚರ್ಚೆಯೊಂದು ಈ ರೂಪದಲ್ಲಿ ಮೂಡಿಬಂದಿದೆ ಎಂದು ಪ್ರಶಂಸಿಸಿದ್ದಾರೆ.
Research: ಸಂಶೋಧನೆ Sahitya Samshodhane: ಸಾಹಿತ್ಯ ಸಂಶೋಧನೆ