ಇದೊಂದು ಅಪರೂಪದ ಕಥಾಸಂಕಲನ, ಕಳೆದ ಒಂದು ನೂರು ವರ್ಷಗಳ ಅವಧಿಯಲ್ಲಿ ಕನ್ನಡ ಸಣ್ಣ ಕತೆ ಸಾಧಿಸಿರುವ ಹರಹು, ಬೀಸು, ಅದರ ವೈವಿಧ್ಯ, ಪರಿಪೂರ್ಣತೆಗಳಿಗೆ ಇದೊಂದು ಕನ್ನಡಿಯಿದ್ದಂತೆ. ಇಲ್ಲಿ ಸಣ್ಣ ಕತೆಯ ಸಾಧ್ಯತೆಗಳನ್ನು ಕಡೆದು ತೋರಿಸುವ ಅತ್ಯುತ್ತಮ ಕೃತಿಗಳಿವೆ, ಹಲವು ಸಾಹಿತ್ಯ ಪಂಥಗಳ ಧೈಯ ಧೋರಣೆಗಳನ್ನು ಪ್ರತಿನಿಧಿಸುವ ವೈವಿಧ್ಯಮಯ ಕತೆಗಳ ಭಂಡಾರ ಇದು. ಗ್ರಾಮೀಣ-ನಗರ ಸಂಸ್ಕೃತಿಗಳ ಒಳಗು ಹೊರಗು, ಪರಂಪರೆ- ಆಧುನಿಕತೆಗಳ ಮುಖಾಮುಖ, ಕಾಲಕ್ರಮದಲ್ಲಿ ಸಣ್ಣಕತೆ ಪಡೆದುಕೊಂಡ ಸಾಮಾಜಿಕ, ರಾಜಕೀಯ ಆಯಾಮಗಳು ಇಲ್ಲಿನ ಕತೆಗಳಲ್ಲಿ ಹರಳುಗಟ್ಟಿವೆ. ಕಥನಕಲೆ, ನಾಟಕೀಯತೆ, ಪಾತ್ರವೈವಿಧ್ಯ, ಸನ್ನಿವೇಶ ನಿರ್ಮಾಣ, ಪ್ರತಿಮಾ ವಿಧಾನ, ನಿರೂಪಣಾ ಶೈಲಿ, ಸಾಂಕೇತಿಕತೆ, ಕಾಲದ ಯೋಜನೆ ಮುಂತಾದ ಕತೆಗಳೊಳಗಿನ ಸಕಲ ಅಂಶಗಳಿಗೂ ಇಲ್ಲಿನ ಕತೆಗಳು ಸಾಕ್ಷಿಯಾಗಿವೆ. ಪಂಜೆ ಮಂಗೇಶರಾಯ, ಕೆರೂರ ವಾಸುದೇವಾಚಾರ್ಯ, ಮಾಸ್ತಿ ಅವರಂಥ ಮೊದಲ ಕತೆಗಾರರಿಂದಇತ್ತೀಚಿನ ವಿವೇಕ ಶಾನಭಾಗ, ಮೊಗಳ್ಳಿ ಗಣೇಶ್, ನಟರಾಜ ಹುಳಿಯಾರ್, ಅಮರೇಶ ನುಗಡೋಣಿ ಅವರಂಥ ಯುವ ಕತೆಗಾರರವರೆಗಿನ ಕನ್ನಡ ಕಥಾಪರಂಪರೆಯ ಮೈಲಿಗಲ್ಲುಗಳು ಇವು. ಈವರೆಗೂ ಕಣ್ಮರೆಯಲ್ಲಿ ಉಳಿದಿದ್ದ ಸೇಡಿಯಾಪು, ಕಡೆಂಗೊಡ್ಲು ಶಂಕರಭಟ್ಟಿ, ದೇವುಡು, ಕೊಡಗಿನ ಗೌರಮ್ಮ ಕೆ. ವಿ. ಅಯ್ಯರ್ ಅವರ ಅಪೂರ್ವ ಕತೆಗಳ ಜೊತೆಗೆ ಕಥಾರಚನೆಯಲ್ಲಿ ತಮ್ಮೆಲ್ಲ ಪ್ರತಿಭೆಯನ್ನು ಮೆರೆದಿರುವ ಯಶವಂತ ಚಿತ್ತಾಲ, ಅನಂತಮೂರ್ತಿ, ಲಂಕೇಶ್, ತೇಜಸ್ವಿ, ಜಯಂತ ಕಾಯ್ಕಿಣಿ, ವೀಣಾ ಶಾಂತೇಶ್ವರ, ವೈದೇಹಿ ಮೊದಲಾದವರ ಸೂಕ್ಷ್ಮ ಸಂವೇದನೆಯ ಕತೆಗಳೂ ಇಲ್ಲಿವೆ. ಕಥಾಪ್ರಕಾರದ ಸಾಧ್ಯತೆಗಳನ್ನೆಲ್ಲ ಸೂರೆಗೊಂಡ ಅತ್ಯುತ್ತಮ ರಚನೆಗಳ ಮಹತ್ವಾಕಾಂಕ್ಷೆಯ ಸಂಕಲನವಾಗಿದೆ 'ಶತಮಾನದ ಸಣ್ಣ ಕತೆಗಳು'.