ಕೆ ಎಸ್ ನ ಆವರ ಕಾವ್ಯದ ಬೆಳವಣಿಗೆಯ ಚರಿತ್ರೆ ಹಾಗೂ ಸತ್ವವನ್ನು ಗುರುತಿಸುತ್ತಲೇ ಅವರ ಅನೇಕ ಮುಖ್ಯ ಕವಿತೆಗಳ ಸೂಕ್ಷ್ಮ ವಿಶ್ಲೇಷಣೆಯನ್ನೂ ನರಹಳ್ಳಿಯವರು ಇಲ್ಲಿ ಮಾಡಿದ್ದಾರೆ. 'ಇಹದ ಪರಿಮಳದ ಹಾದಿ’ ನರಹಳ್ಳಿಯವರ ವಿಮರ್ಶಾಶಕ್ತಿಗೆ ಸಾಕ್ಷಿ. ತಮ್ಮ ವಿಶಿಷ್ಟ ಪ್ರತಿಭೆಯಿಂದ ಕಾವ್ಯವನ್ನು ಜನರ ಬದುಕಿನಲ್ಲಿ ಒಂದಾಗಿಸುವ ಮೂಲಕ ಆಧುನಿಕ ಕಾವ್ಯಕ್ಕೆ ಮಹತ್ವದ ಕೊಡುಗೆ ನೀಡಿದ ಕೆ ಎಸ್ ನರಸಿಂಹಸ್ವಾಮಿಯವರ ಕಾವ್ಯದ ಅಧ್ಯಯನ ಇದುವರೆಗೆ ನಡೆದಿರಲಿಲ್ಲ, ನರಹಳ್ಳಿ ಬಾಲಸುಬ್ರಹ್ಮಣ್ಯ ಕನ್ನಡ ವಿಮರ್ಶೆಯ ಅಗತ್ಯವೊಂದನ್ನು ಸಮರ್ಥವಾಗಿ ಈಡೇರಿಸಿಕೊಟ್ಟಿದ್ದಾರೆ. ಲೇಖಕರು ತಮ್ಮ ನಿಲುವನ್ನು ಸ್ಪಟಿಗೊಳಿಸಲು ನಡೆಸುವ ಚರ್ಚೆ, ವಿಶ್ಲೇಷಣೆ, ಪ್ರತಿಪಾದನೆ ಸಮರ್ಥವೂ, ಉನ್ನತ ಮಟ್ಟದ್ದಾಗಿದ್ದು ಆನಗತ್ಯವೆನಿಸುವ ಯಾವ ಮಾತುಗಳನ್ನೂ ಬಳಸದ ಇವರ ಶೈಲಿ ಸ್ಪಟಿಕದಂತೆ ಸ್ವಚ್ಚವಾಗಿದೆ, ಒಬ್ಬ ಸಮಕಾಲಿನ ಕವಿಯನ್ನು ಕುರಿತ ಅಧ್ಯಯನ ಹೇಗಿರಬೇಕು ಎಂಬುದಕ್ಕೆ ಇದೊಂದು ಮಾದರಿ.